Monday, October 27, 2008

ಇರುವುದೆಲ್ಲವ ಬಿಟ್ಟು...

ನಾವು ಬದುಕುವ ದಾರಿಯಲ್ಲಿ ನಗೆ ಹೂವು ಬಾಡದಿರಲಿ.ಅನ್ನುವ ಮಾತುಗಳು,ಹೇಳಿಕೆಗಳು, ಹಾರೈಕೆಗಳ ರಾಶಿ ನಮ್ಮ ಬದುಕಿನಲ್ಲಿ ಬಂದುಹೋಗುತ್ತೆ. ಎಲ್ಲೋ ಅರಳ ಹೊರಟಿರುವ ಜೀವ ಅನೀರಿಕ್ಷಿವಾಗಿ ತೀರಿ ಹೋದಾಗ ಇನ್ನೆಲ್ಲಿಯ ನಗೆ. ಆತ್ಮೀಯರು ಮುನಿಸಿಕೊಂಡಾಗಲೇ ಆಗುವ ನೋವು ಇನ್ನು ಅವರಿಲ್ಲ ಎಂದಾಗ ಎತ್ತಣಿಂದ ಬರಬೇಕು ನಗು. ಆದರೂ ಬದುಕುವಷ್ಟು ಕಾಲ ನಗುನಗುತ್ತಾ ಬದುಕು ಎನ್ನೋಣವಾದರೂ ಯಾರೋ ಪ್ರೀತಿ ಪಾತ್ರರು ಅಗಲಿದಾಗ ನಮಗಾಗುವ ಬೇನೆ ತಡೆಯಲಾರದು. ಇನ್ನು ಸದಾ ನಗುವ ಕಾಲವೆಲ್ಲಿ. ಬದುಕು ಬೇವು ಬೆಲ್ಲದಂತೆ ಇರಬೇಕು ಎನ್ನುವುದು ಸಾಮಾನ್ಯ ಆಶಯ. ಎಲ್ಲೂ ಬೆಲ್ಲ ಮತ್ತು ಬೇವು ಸರಿಸಮನಾಗಿ ಇರಲಾರದು.ಕೆಲವರ ಜೀವನದಲ್ಲಿ ಬೆಲ್ಲವೇ ತುಂಬಿರುತ್ತದೆ. ಆದರೆ ಅದಕ್ಕೆ ಸಾವು ಅನ್ನುವ ಅಳಿಸಲಾರದ ಬೇವು ತನ್ನ ಪ್ರಮಾಣದ ಇರುವಿಕೆಯನ್ನು ಬಾಳುವೆ ಪೂರ್ತಿ ಆವರಿಸಿಕೊಳ್ಳುತ್ತದೆ.

ಆತ್ಮೀಯರು ಇಂದು ನಮ್ಮಲ್ಲಿಗೆ ಬರುತ್ತಾರೆ ಅನ್ನುವ ವಿಶ್ವಾಸ,ಸಂತೋಷದಿಂದಿರುವಾಗ ಅವರ ಆಗಮನಕ್ಕಾಗಿ ತುದಿಗಾಲಲ್ಲಿ ಆತುರದ ಕಣ್ಣುಗಳಲ್ಲಿ ಕಾಯುತ್ತಿರುವಾಗ ಅವರು ಇನ್ನಿಲ್ಲ ಎನ್ನುವ ವಾರ್ತೆ ಗರಬಡಿದ ಅನುಭವ ನೀಡುತ್ತದೆ. ಪ್ರತಿದಿನದ ಆನಂದವನ್ನು ನೋವೆಂಬ ಕರಾಳತೆ ಕಿತ್ತುಕೊಳ್ಳುತ್ತದೆ. ಜೀವನದ ಬಗೆಗಿರುವ ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ. ನಮ್ಮ ಗೆಳೆಯರ ಆಪ್ತರು ಸಾವಿಗೀಡಾದರೆ ನಮಗೆ ಗೆಳೆಯನ ಸ್ಥಿತಿ ಕಂಡು ಏ ಸುಮ್ನಿರು ಸಮಾಧಾನ ಮಾಡಿಕೋ..ಸಾವು ನಿಶ್ಚಿತ ಅನ್ನುವ ಮಾತುಗಳಿಂದ ಅವನ ನೋವಿನ ಪ್ರಮಾಣ ಕಡಿಮೆಗೊಳಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಅದೇ ಅನುಭವ ನಮಗಾದರೆ ಎಂಬ ಅಂಶ ಯೋಚಿಸಲಿಕ್ಕೂ ಆಗಲ್ಲ. ಆಗ ಕಾಲನಿಗೆ ಶಾಪ ಹಾಕುವುದು... ದೇವರು ನಿಷ್ಕರುಣಿ ಅವ್ನಿಗೆ ದಯೆ ಇಲ್ಲ..ನಾವಲ್ಲ ಅವನೇ ಪಾಪಿ..ಅನ್ನುವಷ್ಟು ಮನಸ್ಸು ಕಠೋರವಾಗುತ್ತದೆ.ಕಾಲನ ಕರೆಗೆ ಓಗೊಡುವವರಿಗಿಂತ ಬದುಕಿದ್ದು ಆ ವಾರ್ತೆಯನ್ನು ಕೇಳುವ ಬಡ ಜೀವಕ್ಕೆ ಆಗುವ ಆಘಾತ,ಭಯಂಕರ.

ಆದರೆ ನಮ್ಮ ಗೆಳೆಯರನ್ನು ದೇವರು ಇಟ್ಟಂಗೆ ಆಗುತ್ತೆ..ದುಃಖದ ಜೊತೆಗೆ ಸುಖ ಕೊಟ್ಟಿರುತ್ತಾನೆ ಕಣೋ ಅನ್ನುತ್ತೇವೆ. ಅವನ ಮುಖದಲ್ಲಿ ಮುಗುಳ್ನಗು ಮೂಡಿಸಲು ಪ್ರಯತ್ನಿಸುತ್ತೇವೆ. ಆ ಕ್ಷಣದಲ್ಲಿ ಮೂಡಿದ ನಗು ಕೂಡ ಕ್ಷಣಿಕವಾಗಿರುತ್ತದೆ. ನಾವು ಒಂದು ಸಂಸ್ಥೆ ಬಿಟ್ಟು ಇನ್ಯಾವುದೋ ಒಕ್ಕೂಟಕ್ಕೆ ಸೇರಿಕೊಂಡಾಗ ಜೀವಂತವಾಗಿದ್ದರೂ ದಿನಂಪ್ರತಿ ದೂರವಾಣಿ..ಬಿಳ್ಕೋಡುಗೆಯ ದಿನ ಪರಸ್ಪರ ಅಪ್ಪುವಿಕೆ...ಪ್ಲೀಸ್ ಮರೆಯಬೇಡ ಅಂದ ಜೀವಗಳು ಪ್ರಪಂಚದಲ್ಲೇ ಸಿಗಲಾರದ ಕಾಣದ ಯಾವುದೋ ಸ್ಥಳಕ್ಕೆ ತೆರಳಿದಲ್ಲಿ ಎಲ್ಲಿಯ ಅಪ್ಪುಗೆ...ಇನ್ನೆಲ್ಲಿಯಾ ಗೆಳೆತನ,ಪ್ರೀತಿ. ಸಾವು ನಮ್ಮ ಕಣ್ಣ ಅಂಚನ್ನು ಒದ್ದೆಯನ್ನಾಗಿಸಿ ಹಾರ್ಟ್ ನಲ್ಲಿ ಮರೆಯಲಾಗದ ನೋವನ್ನು ನಿತ್ಯ ನೂತನವಾಗಿಸಲು ನಾವು ಕಳೆದ ಗೆಳೆತನದ ನೆನಪುಗಳು ಸಹಕಾರಿ..ನೆನಪುಗಳಿದ್ದರೇನು...ಅವರುಗಳಿಲ್ಲ....

ಅವರು ಇನ್ನಿಲ್ಲವಾದಾಗ... ಅವರು ಮುಂದೆ ಮತ್ತೆ ನನ್ನ ಗೆಳೆಯನಾಗಿ,ಗೆಳತಿಯಾಗಿ,ತಾಯಿ ತಂದೆಯಾಗಿ ಸಿಗಲೆಂದು ಬೇಡಿಕೊಳ್ಳುವುದು ಎಲ್ಲೋ ಸಮಾದಾನ ನೀಡಿದರೂ ಸುಖವಾದ ನಿದ್ದೆ ಬರಿಸಲಾರದು.ಸುಖನಿದ್ದೆ ಬರುವುದು ಸಾಧ್ಯವಿಲ್ಲವೆಂದಾಗ ಮತ್ತೆಲ್ಲಿಯ ನೆಮ್ಮದಿ..ಸಮಾಧಾನ. ಇದಕ್ಕೆನೋ ಏನೋ ನಗು, ನೋವು ಬದುಕಿನ ಜೊತೆಗೆನೆ ಸಾವು ಬೆನ್ನ ಹಿಂದಿಗಿರುವುದು.

1 comment:

ಭಾವನೆಗಳಿಗೆ ಜೀವ ತುಂಬುತ್ತ... said...

ಖುಷಿಯಾಯ್ತು... ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟಿದ್ದಕ್ಕೆ...
ಸಾಧ್ಯವಾದಷ್ಟು ಬರಿ...
good luck...